Thursday, 27 June 2013

ಕೇಡುಗಾಲ

ನಡೆದುದೇ ಹಾದಿ
ಇಟ್ಟದ್ದೇ ಹೆಜ್ಜೆ
ನಿಮ್ಮೆಲ್ಲರ ಮುಖದ ಸುನೋವು ಪೌಡರು
ಮತ್ತದರ ಘಮಕ್ಕೆ ಒಲಿದ ಒಂದೆರಡು ಹೆಂಗಳೆಯರ ಹ್ರನ್ಮನಗಳು,

ವಾರೆ ಕ್ರಾಪಿಗೆ ರೇಟು ಹೆಚ್ಚು ಮತ್ತು ಅಡ್ಡ ನಡೆಗಳಿಗೆ
ದೊಗಳೆಯಿದ್ದ ಎಪ್ಪತ್ತರ ದಶಕದ ಶರಾಯಿ ತುದಿಯೀಗ
ಉಸಿರು ಕಟ್ಟಿಸಿದೆ, ಅಮಾಯಕ ತೊಡೆಗಳಿಗೆ, ಬೆಳ್ಳಗಿನವುಗಳಿಗೆ

ಕುತ್ತಿಗೆ ಬಿಗಿದ ಟೈಗಳಿಗೆ ಸಮದ ಗೆರೆಗಳು
ನೂರಾ ನಲ್ವತ್ತು ಡಿಗ್ರಿಗೆ ಬಾಗಿದೆ ಆರೋಹಣದ ಸೂಚನೆ
ಸೂಚ್ಯಂಕವಂತೂ ಕೇಳದಿರಿ, ಬೆಟ್ಟದ ಸಾಲುಗಳ
ನೆನಪಿಸಿದೆ, ಮತ್ತಲ್ಲಿ ಉರಿವ ರವಿಯಿಲ್ಲ,

ಕಾಲ ಕೆಳಗಿನ ಕೆರಗಳಿಗೆ ನಾಯಕನ ಜಾಹೀರಾತು
ಜೊತೆಗೆ ಅವಳು, ಆಗಷ್ಟೇ ಬೊಟ್ಟಿಟ್ಟ ಹುಡುಗಿಗಿನ್ನು
ಹದಿನಾರರ ಅಸುಪಾಸು, ಅವಳ ಅಣ್ಣ ಮೊನ್ನೆಯಷ್ಟೇ
ಹನ್ನೊಂದಕ್ಕೆ ಪಾಸು,

ಮಂದಿರಗಳಿಗಿಲ್ಲ ಭೇಟಿ, ಇದ್ದರಲ್ಲಿಯೂ
ಅಶ್ಲೀಲದ್ದೇ ಮಾತು, ವಿಗ್ರಹದ ಬರಿದೆ
ಎದೆ ಮೂಡುತ್ತದೆ ಕೆಂಪು ಕಣ್ಣಿನ ಮೇಲೆ
ಹೊದ್ದ ಕಪ್ಪು ಗಾಜಿನ ಮೇಲೆ,


ಪ್ರತಿಫಲನದ ಪ್ರತೀಕಾರವಿದು ಬೆಚ್ಚನೆಯ
ಸೂರ್ಯ ಹೊತ್ತಾಗುವುದನೇ ಕಾದಿದ್ದಾನೆ,
ಬಿದ್ದುಹೋಗಲು ದೂರದ ನುಣ್ಣನೆಯ
ಮರೆಯಲ್ಲಿ ಗೊತ್ತಾಗದಂತೆ,

.....ರಾಶೇಕ್ರ

No comments:

Post a Comment